Sunday, August 17, 2008

ನಾಳೆ ಎಂಬುದು ಕತ್ತಲು

ನಾಳೆ ಕತ್ತಲು, ಕಾಣೆ
ಏನು ಅಲ್ಲಿದೆ ಎಂದು
ನಿನ್ನೆಯದು ಬೆತ್ತಲೆಯು
ಉಳಿದಿಲ್ಲ ಒಂದು

ಮಾಡಲೇತಕೆ ನೀನು
ಅದರ ಚಿಂತೆಯನು
ಅಂದಿನ ಕೆಲಸವನು
ಮಾಡಲು ಆಂದಂದು

ಕೀಲು ಕೊಟ್ಟರೆ ಕುಣಿವ
ಗೊಂಬಿಗಳು ನಾವಲ್ಲ
ನಮ್ಮೊಳಗೂ ತುಂಬಿಹವು
ನೂವುಗಳು, ನಲಿವುಗಳು

- 1-

ಯಾರಿಗೋ ಯಾತಕೋ
ಈ ಭೂಮಿ ಬ್ರಹ್ಮಾಂಡ
ಆರೂ ಅರಿದವರಿಲ್ಲ
ಅದರ ಪೂರ್ತಿ ಮರ್ಮ

ಪ್ರೀತಿ ಪ್ರೇಮದ ಜಾತ್ರೆ
ಮಾಡುವುದು ಬಲು ಸರಳ
ಎಲ್ಲವೂ, ಎಲ್ಲದೂ
ಉತ್ತುಂಗದಲಿ ಇರುವಾಗ

ಕಷ್ಟಗಳು ಕೂಡಿರಲು
ಕತ್ತಲೆಯು ತುಂಬಿರಲು
ಎದೆಯಗುಂದದೆ, ಬೆನ್ನು ತೋರದೆ
ನಡೆಯುವುದು ನಿಜ ಧರ್ಮ
- 2 -

ನೋವುಗಳು, ನಲಿವುಗಳು
ನಮ್ಮೆರಡು ಕಣ್ಣುಗಳು
ಬೇಕು ಈ ಎರಡು
ಬದುಕ ಬಿತ್ತಾರವನು ಅರಿಯಲು

ಅಂತರಂಗದ ಕದವ
ನಾವು ತೆರೆಯಲು ಬೇಕು
ಅನಂತ ವಿಶ್ವದಜೊತೆಗೆ
ಪ್ರೀತಿಯಿಂ ಬಾಳಲು

ತಪ್ಪುಗಳು ಸಹಜ
ತದ್ದಿ ನಡೆವುದು ಜಾಣ್ಮೆ
ಅರಿತೂ ಹಠಮಾಡುವುದು
ನಮ್ಮ ಬಾಳ್ವೆಯ ಕುಲ್ಮೆ

-3-

ದೇವ ಮಾನವರು ನಾವಲ್ಲ
ಎಲ್ಲವೂ ಎಣಿಸಿದಂತಿರಲು
ಮಿತಿಯುಳ್ಳ ನರರು
ಹೊಂದಾಣಿಕೆಯೆ ನಮ್ಮ ಕರುಳು

ನಿನ್ನೆಗಳ, ನಾಳೆಗಳ
ಅಡಕತ್ತರಿಗೆ ಸಿಗದುಳಿದು
ಬರುವ ದಿನಗಳಲಿ, ಧೈರ್ಯದಿಂ ಬಾಳು
ಧೈರ್ಯವೇ ನಿಜ, ನಿಜದಿ ಬಾಳು.

-4-
ಜಯಪ್ರಕಾಶ ನೇ ಶಿವಕವಿ.

Friday, April 18, 2008

ನಾ ಸೊತಾಗಲೆಲ್ಲಾ

ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ,
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ
ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.

ಜೊತೆಯಾಗಿ ಬಾಳುವನು, ಹೊರಾಡುವನು,
ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,
ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,
ಅವನೇ ಅವನು ನನ್ನೊಳಗೆ ನೆಲೆಸುವ೦ತವನು

ಈಸೊ೦ದು ದಿನ, ಬೇರೇನೊ೦ದನೂ ನಾನೆಣಿಸಲಿಲ್ಲ
ಅವನು ನನ್ನೊಳಗೆ ಇರುವನೆ೦ಬೊ೦ದು ನೆವದಲ್ಲಿ
ಹೊಳೆವ ರವಿಕಿರಣಗಳ ತೆರನಿದ್ದ ಅವನ ನೆನವಲ್ಲಿ
ತೊರೆಯನವನೆ೦ದಿಗೂ ಎ೦ಬ ತು೦ಬು ಭರವಸೆಯಲ್ಲಿ

ಬದಲಾಗುತಿವೆ ಸಮಯ, ಬದಲಾಗುತಿವೆ ಋತುಗಳು
ನಾನು ಮಾತ್ರವೇ ಒ೦ಟಿ, ಯಾರಿಲ್ಲದೆ ಎನ್ನ ಜೊತೆಯಲ್ಲಿ
ಕಳೆದುಕೊ೦ಡು ಗೆಲುವುಗಳನು,ಸೆಳೆದುಕೊ೦ಡೆ ಸೋಲುಗಳನು
ಎಲ್ಲಿರುವೆಯೊ ಗೆಳೆಯ, ನನ್ನ ಮುನ್ನಡೆಸದೆ ನೀನು

ದಿನಗಳುರುಳಿದ೦ತೆಲ್ಲಾ, ದುಃಖಗಳೂ ಏರುತ್ತಿವೆ
ನಾ ಸರಿಯೊ, ನಾ ತಪ್ಪೊ ಅರಿವಾಗದ೦ತಿದೆ ನನಗೆ
ಬೇಕಾಗಿದೆ ನನಗೀಗ ನಿಮ್ಮಗಳಲ್ಲೊಬ್ಬರ ನೆರವು
ಬರುವಿರಾ ಯಾರಾದರು ನೆರವ ನೀಡುವ ಧೈರ್ಯದಲಿ

ಅವನೇ ನನ್ನ ಆತ್ಮ, ನನ್ನೊಳಗಿನ ಆಲೋಚನೆಗಳು
ಯಾರಾದರು ಅವನ ನನ್ನೆಡೆಗೆ ತರುವಿರಾ
ಭಯವಿದ್ದರೇನು, ಬಿಕ್ಕಟ್ಟುಗಳಿದ್ದರೇನು ನನ್ನೊಳಗೆ
ಆರದೆ ಇದೆ ಇನ್ನೂ ಭರವಸೆ, ಮತ್ತೊಮ್ಮೆ ಅವನು ನನ್ನಲ್ಲಿ ನೆಲೆಸುವನೆ೦ದು..

(ಇ೦ಗ್ಲಿಷ್ ನಿ೦ದ ಕನ್ನಡಕ್ಕೆ ಆನುವಾದಿಸಿದವರು - ಜಯಪ್ರಕಶ್ ನೆವಾರ ಶಿವಕವಿ.)

Thursday, April 17, 2008

ಮುನ್ನಡೆ ಮನವೆ

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಹಿರಿದು ಕಿರಿದು ಎಲ್ಲ ಸುಳ್ಳು

ಮೇಲು ಕೀಳು ಬರಿ ಜೊಳ್ಳು

ನಂಬದಿರು, ನೆಚ್ಚದಿರು

ಮಾಯೆಯ ಮಾಯೆಯಲಿ ನೀನು ಸಿಲುಕದಿರು।


ಆರಿಗಿಲ್ಲ ಆರು ಸಾಟಿ

ಆರಮೇಲೋ ಆರ ಪೈಪೋಟಿ।

ಒಬ್ಬರಂತೆ ಒಬ್ಬರಲ್ಲ

ಅರಿತು ಅರಿಯದಿರುವೆಯಲ್ಲ।


ಬಾಳಿನಲ್ಲಿ ಎಲ್ಲ ಉಂಟು,

ಉಂಟು ಎಂದುಕೊಂಡರೆ।

ಏನೂ ಇಲ್ಲ, ಎಲ್ಲ ಇದ್ದು

ಇಲ್ಲ ಎಂದು ಕೊಂಡರೆ।


ಇರುವು ಇರವುಗಳ ನಡುವೆ

ಏನಿಲ್ಲ ಅಂತ ಫರಕು

ಅದು ನಿನ್ನ ಭ್ರಮೆ

ಬರಿ ಭ್ರಾಂತಿ ಹರಕು-ಹರಕು।

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಬುದ್ದನೇಳಿದ ಬದ್ದಿ ಮಾತು

ನೀನು ಮರೆತೆಯಾ

ನಿನ್ನ ಒಡನೆ ನೀನೆ

ಕಾಳಗಕೆ ನಿಂತೆಯಾ।


ಆಸೆ ಎಂಬುದು ಬಿಸಿಲ ಕುದುರೆ

ದುಸ್ತರವು ಅದನ ಏರುವುದು

ವಾಸ್ತವದ ಅರಿವು ಅರಿತುಕೊಂಡು

ಮುನ್ನಡೆ ನೀ ಶರಣಾಗದೆ।

ಬದುಕ ಇಬ್ಬಂದಿಗಳಿಗೆ

ಬೆನ್ನ ತೋರಿಸದಿದ್ದು

ಸದಾ ಒಳಿತನ್ನೆ ನೆನೆದು

ಮುನ್ನಡೆ ನೀ ಶರಣಾಗದೆ।


ಅಲ್ಲಿ ಇಲ್ಲಿ ಅಲೆವುದನ ಬಿಟ್ಟು

ಹಿಡಿದ ದಾರಿಯಲಿ ಮನಸನಿಟ್ಟು

ಮುನ್ನಡೆ ನೀ ಮನವೆ, ಅವರನಿವರನು ನೋಡುವುದ ಬಿಟ್ಟು
- ಜಯಪ್ರಕಾಶ ನೇ ಶಿವಕವಿ.

Tuesday, April 8, 2008

ಕವಿತಳಿಲ್ಲದೆ, ಕವಿತೆ

ಕವಿತಳಿಲ್ಲದೆ, ಕವಿತೆ
ಮನಕೆ ಒಗ್ಗಿತು ಹೇಗೆ?
ಗಾಳಿಯಿಲ್ಲದೆ, ಗಂಧ
ಜಗಕೆ ಹಬ್ಬಿತು ಹೇಗೆ?

ಕವಿತಳನು, ಕವಿತೆಯನು
ಎದೆಯಲದುಮಿಕೊಂಡು
ಹೊಳೆಯ ದಾಟಿ, ಕಡಲನಾರಿ
ಪರನಾಡಲಿಳಿದುಕೊಂಡೆ।

ಅವಕಾಶವೊ, ಅನಿವಾರ್ಯವೊ?
ಬಾಳ್ವೆಯ ಸುದಿನವೊ, ದುರ್ದಿನವೊ
ಆರನರಿಯೆ, ಆರಕಾಣೆ
ಬರಿ ಗೊಂದಲವು, ಮನದೊಳಗೆ....

ಎದುರು ಗೊಂಡವರೆಲ್ಲ
ಹಲ್ಲು ಕಿರಿವಾಗ
ಇಷ್ಟವೊ, ಅನಿಷ್ಟವೊ
ಮುಖವರಳುವುದು ಅದರರಿವಿಲ್ಲದೆಯೆ।

------1------
ಸುತ್ತಲೆಂದರೆ, ಒಪ್ಪಿತೇಗೆ ಮನ
ಒಂಟಿಯಾಗಿ, ಒಬ್ಬೊಂಟಿಯಾಗಿ
ಬೇಸರದ ಆಸರಿಕೆಗೆ, ಅವಳಿಲ್ಲದೆ
ಕವಿತಳಿಲ್ಲದೆ, ಜೊತೆಯಾಗಿ

ತುಡಿತವೊ, ಎದೆ ಮಿಡಿತವೊ
ಭಾವತುಮುಲದ ತೀವ್ರತೆಯೊ
ನನ್ನೂರ ನೇಸರನ, ಬೇಸರಕೆ
ಜೊತೆ ಮಾಡಿದಳು, ಬೈಗಿನಲು ಬೆಳಗಿನಲು

ಕವಿತಳಿಲ್ಲದೆ, ಬಳಿಯಲ್ಲಿ
ಬರಿ ಕನಸು, ಇರುಳಲ್ಲಿ
ನಾ ನಿಲ್ಲಿ, ಅವಳಲ್ಲಿ
ಬರಿ ನೆನಪು ನಮ್ಮಲ್ಲಿ।

ಕವಿತಳನು, ಕವಿತೆಯನು
ನಾ ದೂರಮಾಡಿಕೊಂಡು
ಹಗಲು, ಇರುಳು ಬಡಿದಾಡುತಿರುವೆ
ಜಗದ ನೊಗವ ಮೇಲೇರಿಕೊಂಡಂತೆ

ಇರುವುದೊಂದೆ,ಸಮಾಧಾನ
ಇದು ಎಲ್ಲಾ ಬರಿ ನಾಲ್ಕುದಿವಸ
ಕವಿತೆಯನು, ಕವಿತಳನು ಕಾಣ್ವದಿನ
ದೂರವಿಲ್ಲವೆಂಬುದೆ, ಮನಕೆ ಹರುಷ
- ಜಯಪ್ರಕಾಶ ನೇ ಶಿವಕವಿ।

Tuesday, February 19, 2008

ಜಾನಪದ ಹಾಡು.


ಅವಳಿಲ್ಲದಾಗ ಮುಂಜಾನೆ ಎದ್ದು

ಮಾಡಬೇಕ್ರಿ ಮನೆಯ ಕೆಲಸ

ಅವಳೆಂದು ಮನೆಗೆ ಬರುತಾಳೆ ಏನೋ

ನನಗಿಲ್ರಿ ಅಷ್ಟು ಸೊಗಸ

ಕಸಬರಿಗೆ ಹಿಡಿದು ಹಸನಾಗಿ ಬಳಿದು

ಒಲೆ ಬೂದಿ ಚೆಲ್ಲಬೇಕು

ಮುಸುರೀಯ ತಿಕ್ಕಿ ಹೊಸ್ತಿಲನು ಸಾರ್ಸಿ

ರಂಗೋಲಿ ಹುಯ್ಯಬೇಕು


ಒಲೆ ಊದಿ ಊದಿ ಹೊಗೆ ಬಡಿಸಿಕೊಂಡು

ಕಣ್ಣೀರ ಒರೆಸಿಕೊಂಡೆ

ತಲೆ ಸೂಲಿಯಿಂದ ಅವಳನ್ನು ಬೈದು

ಗುಳುಗೀಯ ತೆಗೆದುಕೊಂಡೆ


ತಲೆದಿಂಬು ಹಾಸ್ಗೆ ಚಾದರವ ನೋಡಿ

ಏನೇನೊ ನೆನೆದುಕೊಂಡೆ

ಕೆಡಿಸಿದಳು ಬುದ್ಧಿ, ತವರೂರೆಗ್ಹೋಗಿ

ಮಾಡಲೇನು ಮಲಗಿಕೊಂಡೆ।
ಜಾನಪದ ಹಾಡು। (ಸಂಗ್ರಹ )

Friday, February 15, 2008

ಬೆಂಗಳೂರ ಬೀದಿಗಳಲ್ಲಿ......

ಹಗಲು ಇರುಳು ಅತಂತ್ರನಾಗಿ
ವಾರವೆಲ್ಲ ಯಂತ್ರವಾಗಿ
ವಾರದಕೊನೆ ಮನುಜನಾಗಿ,
ಬದುಕಿರುವೆ ನಾ ಬೆಂಗಳೂರ ಬೀದಿಗಳಲ್ಲಿ।

ನಗುವ ಮುಸುಡುಗಳ ನಗುವಿಲ್ಲಿ
ನಂಬುವ ಹಾಗೆ ಇರುವುದಿಲ್ಲ
ನಡೆವುದೆಲ್ಲ ಇಲ್ಲಿ ನಿಜವು ಎಂದು
ತೋರುವ ಹಾಗೆ ಕಾಣುವುದಿಲ್ಲ

ಯಾವ ವಾರ, ಯಾವ ತಿಥಿ
ಯಾವುದೊಂದು ತಿಳಿವುದಿಲ್ಲ
ಎಷ್ಟು ಜನರೊ, ಎಷ್ಟು ಮಾತೋ
ಯಾವುದೊಂದು ಅರಿವುದಿಲ್ಲ

ಆರ ಜೊತೆಗೊ ಆರ ಮಾತೊ
ಆರ ನಾರು ಬಲ್ಲರಿಲ್ಲ
ದೂರ-ದೂರ ದೇಶಗಳಿಗೆ
ಗಳಿಗೆ-ಗಳಿಗೆ ಗೊಮ್ಮೆ ಕರೆಯೊ

ಒಡನೆ ಆಡಿ, ಒಡನೆ ಬೆಳೆದ
ಒಂದೆ ಗಂಗಾಳದಲ್ಲಿ ಉಂಡ
ಎಳೆಯ ಗೆಳೆಯರೆಲ್ಲರಿಗೂ
ಹತ್ತಿರವಿದ್ದು ಬಹು ದೂರ ದೂರ ನಾನು।

ಹುಟ್ಟಿ ನಲಿದ ನಾಡು ಏಕೆ?
ಹಾಡಿ ಉಲಿದ ಭಾಷೆಯೇಕೆ?
ಎಲ್ಲ ಮರೆತೆ, ಎಲ್ಲ ತೊರೆದೆ
ಮನವ ಮೆತ್ತಿದ ಹಣ-ಹೆಸರ ಮದಕೆ।

ಸಂಚಾರಿ ಒತ್ತಡಗಳ ನಡುವಿನಲ್ಲಿ
ಬಗೆ-ಬಗೆ ಮಂದಿಗಳ ಸಂತೆಯಲ್ಲಿ
ನಾನೂ ಕಳೆದು ಹೋದೆ
ಬೆಂಗಳೂರ ಬೀದಿಗಳಲ್ಲಿ

ಜಯಪ್ರಕಾಶ ನೇ ಶಿವಕವಿ