Tuesday, April 19, 2011

ನೀನೆ ತಾನೆ ಜೀವವಾದೆ

ನೀನೆ ತಾನೆ ಜೀವವಾದೆ
ನನ್ನ ಜೀವದ ಜೀವಕೆ
ನೀನೆ ತಾನೆ ಭಾವವಾದೆ
ನನ್ನ ಎದೆಯ ರಾಗಕೆ

ನಿನ್ನ ಪ್ರೀತಿಯ ಬೇಲಿಯೊಳಗೆ
ಬಂಧಿಯಾಗಿದೆ ಈ ಮನ
ನಿಂತ ನಿಲುವಿನಲ್ಲೆ, ನಲ್ಲೆ
ಮರೆತು ಹೋದೆ ನನ್ನೆನಾ

ನಿನ್ನ ನಗೆಯ ಮೊದಲ ನೆನಪು
ಮತ್ತೆ ಮತ್ತೆ ಕಂಡಿದೆ
ನಿನ್ನ ಗೆದ್ದ ಗುಂಗಿನೊಳಗೆ
ಎದೆಯು ಏನೋ ಹಾಡಿದೆ

ನೀನೆ ತಾನೆ ಜೀವವಾದೆ
ನನ್ನ ಜೀವದ ಜೀವಕೆ
ನೀನೆ ತಾನೆ ಭಾವವಾದೆ
ನನ್ನ ಎದೆಯ ರಾಗಕೆ

ಎಂದೋ ಕಂಡ ಕನಸ ಬಿಂಬ
ಕಣ್ಣ ಮುಂದೆ ಬಂದಿದೆ
ಒಲವೆ ನಿನ್ನ ಒಂದೆ ನೋಟ
ನನ್ನ ತನವ ಮರೆಸಿದೆ

ನಿನ್ನ ಮನದ ಮಾತುಗಳಿಗೆ
ನನ್ನ ದನಿಯು ಕೂಡಿದೆ
ಬರುವ ನನ್ನ ದಿನಗಳೆಲ್ಲಾ
ನಿನ್ನದಾಗೆ ಹೋಗಿದೆ

ನೀನೆ ತಾನೆ ಭಿತ್ತಿಯಾದೆ
ನನ್ನ ಬಾಳ ಕವನಕೆ
ನೀನೆ ತಾನೆ ಬಣ್ಣವಾದೆ
ನನ್ನ ಎದೆಯ ಭಾವಕೆ

ನೀನೆ ತಾನೆ ನನ್ನ ಜಗವು
ನನ್ನ ಜೀವದ ಕಣಕಣಕೆ
ನೀನೆ ತಾನೆ ಕೊನೆಯ ಗುರಿಯು
ನನ್ನ ಬಾಳ ಪಯಣಕೆ

-ಜಯಪ್ರಕಾಶ ನೇ ಶಿವಕವಿ

Wednesday, February 16, 2011

ಮುಗುದೆ ನಿನ್ನ ಮನದ ದುಗುಡ

ಮುಗುದೆ ಮುಡಿದ ಮಲ್ಲೆ ಮೊಗ್ಗು
ಅರಳದಿವೆ ಮನಸ ಮುನಿದು
ಗಲ್ಲೆನ್ನುವ ಕೈಯ ಬಳೆಗಳು
ಕೊರಳಬಿಗಿದಿವೆ ಕೋಪ ತಳೆದು

ಮುಗುದೆ ನಿನ್ನ ಮೊಗದ ಗೆರೆಯ
ಹಿಂದೆ ದುಗುಡವೆನೋ ಅಡಗಿದೆ
ತುಟಿಯ ಮೇಲೆ ಅರಳದಲೆ ಕಿರುನಗೆ
ಮೊಗದ ಕಳೆಯು ಕಳೆದಿದೆ

ಹಳೆಯ ದಿನದ ಕಳೆದ ಕತೆಯ
ಕಳೆದು ಹೋಗಲು ಬಿಟ್ಟುಬಿಡು
ಸೆಳೆದು ಸೆಳೆದು ಯಾಕೆ ಕೊರಗುವೆ
ಸುಳಿಯ ನೀನು ತೊರೆದುಬಿಡು

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ಮಾತು ಕೊಡುವೆ ಮನಸಿನಿಂದ
ಆತುಕೊಳುವೆ ಕೊನೆಯವರೆಗೆ
ಅತ್ತ ಇತ್ತ ಹೊರಳದಂತೆ
ಮತ್ತೆ ಏನ ನೆನೆಯದಂತೆ

ಒಂದೆ ನುಡಿಯು ಒಂದೆ ನಡೆಯು
ಅಂದು ಇಂದು ಎಂದೂ ಒಂದೆ
ಮುಂದೆ ಬೇರೆಯಾಡದಂತೆ
ಇಂದೆ ವಚನ ನೀಡುವೆ

ತೂರಿ ಬರುವನು ತೂರ್ಪಿನಲ್ಲಿ
ಮೇರೆ ಅರಿಯದ ದಿನಕರ
ತೆರೆದ ಮನಸು, ತೆರೆದ ಹೃದಯ
ತೆರವಿಲ್ಲದ ಸ್ವಾಗತಿಸುವೆ

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ರಚನೆ :-ಜಯಪ್ರಕಾಶ ನೇ ಶಿವಕವಿ

Friday, January 7, 2011

ಗೆಳತಿ


ಗೆಳತಿ ನಿನ್ನದೇ ಮುಖ..
ಮರೆತೇ ಹೊಗಿತ್ತು
ಅ೦ತರಾಳದಲಿ ಸೆರಿಕೊ೦ಡು
ಅಲೆ ಎಬ್ಬಿಸದೆ ಮಲಗಿತ್ತು.

ತುಟಿಯ೦ಚಿನಲಿ
ಅರಳಿದ ಆ ನಗೆ
ಸಹಜವಾಗಿಯೇ ಇತ್ತು
ನಿನ್ನದೇ ಆದ ಆ ಮುಖವನು
ಮರೆ ಮಾಚುವ ತವಕದಲಿತ್ತು

ಬದುಕು ಸಹಜವಾದುದು
ಅದಕೇಕೆ ಬಣ್ಣ ಬಳಿಯಬೇಕು
ಇದ್ದದೆಲ್ಲವನು ಇದ್ದ ಹಾಗೆ
ಹೇಳಲಾಗದ ಯಾತನೆ ಯಾಕೆ ಬೇಕು?


ಹೌದು!
ಅ೦ದೊ೦ದು ದಿನ ಸ೦ಜೆಯಲ್ಲಿ
ಕೆ೦ಪೇರಿತ್ತು ಸುತ್ತಮುತ್ತಲಲ್ಲಿ
ಭೂತಾಯಿ ನಾಚಿ ನೀರಾಗಿ
ಮಧುವಣಗಿತ್ತಿಯ೦ತಾಗಿ
ಮರೆಯುತ್ತಿರುವ ಸಮಯದಲ್ಲಿ
ಹಕ್ಕಿಗಳ ಹಿ೦ಡು, ಮರಳುತ್ತಿತ್ತು ಗೂಡಿಗೆ,
ಮಕ್ಕಳ ಪಾಲನೆಗೆ
ತುಸು ಅಕ್ಕಿ ಹೊತ್ತುಕೊ೦ಡು,
ಹಾಡುತ್ತ, ಕುಣಿಯುತ್ತ…
ಚಿತ್ತಾರ ಬರೆಯುತ್ತ..
ಅ೦ಬರದಲ್ಲಿ…


ಬೆಳಕು ಮುರಿಯಿತು
ಕತ್ತಲಾವರಿಸಿತು
ತಾರೆಗಳ ಹಿ೦ಡು ಧುಮ್ಮಿಕ್ಕಿ ಬ೦ತು
ಅ೦ಗಳಕೆ ಆಡಲು,
ತಿ೦ಗಳ ಚ೦ದ್ರಮನ ಜೊತೆಗೆ,
ನೀರವತೆಯು ತು೦ಬಿತ್ತು
ಸುತ್ತಲೂ, ಎತ್ತೆತ್ತಲೂ…


ನನ್ನ ಜೊತೆ ನೀನು
ನಿನ್ನ ಜೊತೆ ನಾನು
ಊರ ಹೊರಗಿನ ಕೆರಯ ಅ೦ಗಳದಲ್ಲಿ
ಮೌನ ಮುರಿಯಲು ಇಲ್ಲ
ಮಾತನಾಡಲು ಇಲ್ಲ
ನನ್ನೆಡೆಗೊ೦ದು ನೇಟ ಬೀರಿ,
ತುಸು ನಕ್ಕು, ಅತ್ತು,
ನೀನೊರಟೆ ಹಿಡಿದು ಊರ ದಾರಿ,
ನಾ ಕಾರಣ ಕೇಳುವ ಮೊದಲೇ…


ನಾ ಕಾದೆ, ಅದೇ ಜಾಗದಲಿ
ಮತೇ ನೀ ಬರುವೆ ಎ೦ಬೊ೦ದು ಆಸೆಯಲಿ
ನಮ್ಮ ಕನಸಿನ ಪ್ರೇಮಸೌಧದ ನೆನಪಿನಲಿ
ಸುದ್ದಿ ಇರಲಿಲ್ಲ, ಸುಳುವು ಸಿಗಲಿಲ್ಲ…


ಆದರೇ!
ಒಮ್ಮಿ೦ದೊಮ್ಮೆಲೇ…
ಹೇಗೋ ತಿಳಿಯಿತು
ನೀ ಬಹುದೂರ ಹೊದದ್ದು
ಸ೦ಪ್ರದಾಯದೊಳೆಯಲ್ಲಿ
ತೇಲಿ, ಆ ದಡವ ಸೇರಿದ್ದು
ಅರ್ಥವಾಯಿತು ನಿನ್ನ ಆ
ನಗು ತು೦ಬಿದಳುವು,
ಅಳುತು೦ಬಿದ ನಗುವು
ಮತ್ತೇನ ಮಾಡುವುದು
ಹೊತ್ತು ಮೀರಿ ಹೋಗಿತ್ತು
ದಾರಿ ಅಲ್ಲಿ ಕವಲಾಗಿತ್ತು.

ಬದುಕಲ್ಲವೇ ಇದು!
ಬದುಕ ಬೇಕಾಯ್ತು ನೋಡು
ಮನಸೊ೦ದು ಕಡೆ,
ಒಡಲೊ೦ದು ಕಡೆ,
ಹೇಗೋ ಸ೦ಭಾಳಿಸಿದೆ ಕೊನೆಗೆ,
ತ೦ದು ಮನಸನು ತಹಬದಿಗೆ.
ಗ೦ಡಸಲ್ಲವೇ ನಾನು!
ಅಳುತ ಕೂರುವುದು ಸರಿಯೇ?
ನಕ್ಕೆ! ನಕ್ಕೇ !!
ದಿನ ಹೋಗಿ ಅದೇ ಜಾಗದಲಿ!
ನಿನ್ನ ನೆನಪುಗಳನೆಲ್ಲ
ಅಳಿಸಿ ಹಾಕುವ ನೆವದಲ್ಲಿ.


ಹೋಗಲಿ!
ಹಳೆಯ ಹಾಡನು
ಮರೆವೆ ನಾನು
ಹೇಗಿರುವೆ ಮದುವೆಯಾಗಿ?
ಮೂರು ಮಕ್ಕಳ ತಾಯಾಗಿ?
ನೆನಪಿದ್ದರೆ ನಿನಗೆ, ನಮ್ಮ ಆ ಕ್ಷಣಗಳನು
ಮರೆತು ಬಿಡೆ೦ದು ಬೆಡುವೆನು
ಒಲವ ಬದಿಗಿಟ್ಟು
ಸ್ನೇಹದ ಗಿಡವ ನೆಟ್ಟು
ಬೆಳೆಸೋಣ, ಬದುಕೋಣ..
ಕವಲೊಡೆದ ದಾರಿಯಲಿ
ಒಬ್ಬರಿಗೊಬ್ಬರು ನೆರವಾಗುತಲಿ
ಈ ಬಾಳ ಸವೆಸೋಣ….
- ಜಯಪ್ರಕಶ್ ನೇವಾರ ಶಿವಕವಿ