Showing posts with label ಕನ್ನಡ. Show all posts
Showing posts with label ಕನ್ನಡ. Show all posts

Sunday, August 17, 2008

ನಾಳೆ ಎಂಬುದು ಕತ್ತಲು

ನಾಳೆ ಕತ್ತಲು, ಕಾಣೆ
ಏನು ಅಲ್ಲಿದೆ ಎಂದು
ನಿನ್ನೆಯದು ಬೆತ್ತಲೆಯು
ಉಳಿದಿಲ್ಲ ಒಂದು

ಮಾಡಲೇತಕೆ ನೀನು
ಅದರ ಚಿಂತೆಯನು
ಅಂದಿನ ಕೆಲಸವನು
ಮಾಡಲು ಆಂದಂದು

ಕೀಲು ಕೊಟ್ಟರೆ ಕುಣಿವ
ಗೊಂಬಿಗಳು ನಾವಲ್ಲ
ನಮ್ಮೊಳಗೂ ತುಂಬಿಹವು
ನೂವುಗಳು, ನಲಿವುಗಳು

- 1-

ಯಾರಿಗೋ ಯಾತಕೋ
ಈ ಭೂಮಿ ಬ್ರಹ್ಮಾಂಡ
ಆರೂ ಅರಿದವರಿಲ್ಲ
ಅದರ ಪೂರ್ತಿ ಮರ್ಮ

ಪ್ರೀತಿ ಪ್ರೇಮದ ಜಾತ್ರೆ
ಮಾಡುವುದು ಬಲು ಸರಳ
ಎಲ್ಲವೂ, ಎಲ್ಲದೂ
ಉತ್ತುಂಗದಲಿ ಇರುವಾಗ

ಕಷ್ಟಗಳು ಕೂಡಿರಲು
ಕತ್ತಲೆಯು ತುಂಬಿರಲು
ಎದೆಯಗುಂದದೆ, ಬೆನ್ನು ತೋರದೆ
ನಡೆಯುವುದು ನಿಜ ಧರ್ಮ
- 2 -

ನೋವುಗಳು, ನಲಿವುಗಳು
ನಮ್ಮೆರಡು ಕಣ್ಣುಗಳು
ಬೇಕು ಈ ಎರಡು
ಬದುಕ ಬಿತ್ತಾರವನು ಅರಿಯಲು

ಅಂತರಂಗದ ಕದವ
ನಾವು ತೆರೆಯಲು ಬೇಕು
ಅನಂತ ವಿಶ್ವದಜೊತೆಗೆ
ಪ್ರೀತಿಯಿಂ ಬಾಳಲು

ತಪ್ಪುಗಳು ಸಹಜ
ತದ್ದಿ ನಡೆವುದು ಜಾಣ್ಮೆ
ಅರಿತೂ ಹಠಮಾಡುವುದು
ನಮ್ಮ ಬಾಳ್ವೆಯ ಕುಲ್ಮೆ

-3-

ದೇವ ಮಾನವರು ನಾವಲ್ಲ
ಎಲ್ಲವೂ ಎಣಿಸಿದಂತಿರಲು
ಮಿತಿಯುಳ್ಳ ನರರು
ಹೊಂದಾಣಿಕೆಯೆ ನಮ್ಮ ಕರುಳು

ನಿನ್ನೆಗಳ, ನಾಳೆಗಳ
ಅಡಕತ್ತರಿಗೆ ಸಿಗದುಳಿದು
ಬರುವ ದಿನಗಳಲಿ, ಧೈರ್ಯದಿಂ ಬಾಳು
ಧೈರ್ಯವೇ ನಿಜ, ನಿಜದಿ ಬಾಳು.

-4-
ಜಯಪ್ರಕಾಶ ನೇ ಶಿವಕವಿ.

Tuesday, April 8, 2008

ಕವಿತಳಿಲ್ಲದೆ, ಕವಿತೆ

ಕವಿತಳಿಲ್ಲದೆ, ಕವಿತೆ
ಮನಕೆ ಒಗ್ಗಿತು ಹೇಗೆ?
ಗಾಳಿಯಿಲ್ಲದೆ, ಗಂಧ
ಜಗಕೆ ಹಬ್ಬಿತು ಹೇಗೆ?

ಕವಿತಳನು, ಕವಿತೆಯನು
ಎದೆಯಲದುಮಿಕೊಂಡು
ಹೊಳೆಯ ದಾಟಿ, ಕಡಲನಾರಿ
ಪರನಾಡಲಿಳಿದುಕೊಂಡೆ।

ಅವಕಾಶವೊ, ಅನಿವಾರ್ಯವೊ?
ಬಾಳ್ವೆಯ ಸುದಿನವೊ, ದುರ್ದಿನವೊ
ಆರನರಿಯೆ, ಆರಕಾಣೆ
ಬರಿ ಗೊಂದಲವು, ಮನದೊಳಗೆ....

ಎದುರು ಗೊಂಡವರೆಲ್ಲ
ಹಲ್ಲು ಕಿರಿವಾಗ
ಇಷ್ಟವೊ, ಅನಿಷ್ಟವೊ
ಮುಖವರಳುವುದು ಅದರರಿವಿಲ್ಲದೆಯೆ।

------1------
ಸುತ್ತಲೆಂದರೆ, ಒಪ್ಪಿತೇಗೆ ಮನ
ಒಂಟಿಯಾಗಿ, ಒಬ್ಬೊಂಟಿಯಾಗಿ
ಬೇಸರದ ಆಸರಿಕೆಗೆ, ಅವಳಿಲ್ಲದೆ
ಕವಿತಳಿಲ್ಲದೆ, ಜೊತೆಯಾಗಿ

ತುಡಿತವೊ, ಎದೆ ಮಿಡಿತವೊ
ಭಾವತುಮುಲದ ತೀವ್ರತೆಯೊ
ನನ್ನೂರ ನೇಸರನ, ಬೇಸರಕೆ
ಜೊತೆ ಮಾಡಿದಳು, ಬೈಗಿನಲು ಬೆಳಗಿನಲು

ಕವಿತಳಿಲ್ಲದೆ, ಬಳಿಯಲ್ಲಿ
ಬರಿ ಕನಸು, ಇರುಳಲ್ಲಿ
ನಾ ನಿಲ್ಲಿ, ಅವಳಲ್ಲಿ
ಬರಿ ನೆನಪು ನಮ್ಮಲ್ಲಿ।

ಕವಿತಳನು, ಕವಿತೆಯನು
ನಾ ದೂರಮಾಡಿಕೊಂಡು
ಹಗಲು, ಇರುಳು ಬಡಿದಾಡುತಿರುವೆ
ಜಗದ ನೊಗವ ಮೇಲೇರಿಕೊಂಡಂತೆ

ಇರುವುದೊಂದೆ,ಸಮಾಧಾನ
ಇದು ಎಲ್ಲಾ ಬರಿ ನಾಲ್ಕುದಿವಸ
ಕವಿತೆಯನು, ಕವಿತಳನು ಕಾಣ್ವದಿನ
ದೂರವಿಲ್ಲವೆಂಬುದೆ, ಮನಕೆ ಹರುಷ
- ಜಯಪ್ರಕಾಶ ನೇ ಶಿವಕವಿ।