ಮುಗುದೆ ಮುಡಿದ ಮಲ್ಲೆ ಮೊಗ್ಗು
ಅರಳದಿವೆ ಮನಸ ಮುನಿದು
ಗಲ್ಲೆನ್ನುವ ಕೈಯ ಬಳೆಗಳು
ಕೊರಳಬಿಗಿದಿವೆ ಕೋಪ ತಳೆದು
ಮುಗುದೆ ನಿನ್ನ ಮೊಗದ ಗೆರೆಯ
ಹಿಂದೆ ದುಗುಡವೆನೋ ಅಡಗಿದೆ
ತುಟಿಯ ಮೇಲೆ ಅರಳದಲೆ ಕಿರುನಗೆ
ಮೊಗದ ಕಳೆಯು ಕಳೆದಿದೆ
ಹಳೆಯ ದಿನದ ಕಳೆದ ಕತೆಯ
ಕಳೆದು ಹೋಗಲು ಬಿಟ್ಟುಬಿಡು
ಸೆಳೆದು ಸೆಳೆದು ಯಾಕೆ ಕೊರಗುವೆ
ಸುಳಿಯ ನೀನು ತೊರೆದುಬಿಡು
ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ
ಮಾತು ಕೊಡುವೆ ಮನಸಿನಿಂದ
ಆತುಕೊಳುವೆ ಕೊನೆಯವರೆಗೆ
ಅತ್ತ ಇತ್ತ ಹೊರಳದಂತೆ
ಮತ್ತೆ ಏನ ನೆನೆಯದಂತೆ
ಒಂದೆ ನುಡಿಯು ಒಂದೆ ನಡೆಯು
ಅಂದು ಇಂದು ಎಂದೂ ಒಂದೆ
ಮುಂದೆ ಬೇರೆಯಾಡದಂತೆ
ಇಂದೆ ವಚನ ನೀಡುವೆ
ತೂರಿ ಬರುವನು ತೂರ್ಪಿನಲ್ಲಿ
ಮೇರೆ ಅರಿಯದ ದಿನಕರ
ತೆರೆದ ಮನಸು, ತೆರೆದ ಹೃದಯ
ತೆರವಿಲ್ಲದ ಸ್ವಾಗತಿಸುವೆ
ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ
ರಚನೆ :-ಜಯಪ್ರಕಾಶ ನೇ ಶಿವಕವಿ
Wednesday, February 16, 2011
Subscribe to:
Posts (Atom)